ಮಂಗಳೂರು: ‘ಯೇಸು ಪ್ರೀತಿಸುವ ಕಲೆಯನ್ನು ಕಲಿಸಿದ್ದಾರೆ. ಯೇಸು ಕ್ರಿಸ್ತ್ ರು ದ್ವೇಷ ಭಾವನೆ ದೂರ ಸರಿಸಿ ಪ್ರೀತಿ ಹಂಚಿದವರು. ದ್ವೇಷ ಮಾಡುವವರನ್ನು ಕೂಡ ಪ್ರೀತಿಯಿಂದ ಕಂಡಾಗ ತ್ಯಾಗ, ದೈವಿಕತೆ, ಸದ್ಗುಣಗಳನ್ನು ಮೈಗೂಡಿಕೊಳ್ಳುತ್ತವೆ‘ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಾಲ್ಡಾನಾ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕ್ರಿಸ್ಮಸ್ ಹಬ್ಬದ ಸಂದೇಶ ನೀಡಿದರು.
ಯೇಸು ಕ್ರಿಸ್ತರ ಬೋಧನೆ ಹಾಗೂ ಅಹಿಂಸಾ ಮಾರ್ಗವೂ ಎಲ್ಲರಿಗೂ ಪ್ರೀತಿ ಪಾತ್ರವಾಗಿವೆ. ದನದ ಕೊಟ್ಟಿಗೆಯಲ್ಲಿ ಜನಿಸಿದ ಬಾಲಯೇಸು ಅಲ್ಲಿ ನೆಲೆಸಿದ ಸರಳತೆ ಹಾಗೂ ಶಾಂತತೆಯ ಪ್ರತೀಕವಾಗಿದ್ದಾರೆ. ಏಸು ಕ್ರಿಸ್ತರ ಆದರ್ಶ, ಪ್ರೀತಿಸುವ ಗುಣ, ಕ್ಷಮಿಸು
ವ ಮಾನವೀಯತೆ ಎಲ್ಲರಲ್ಲಿ ಬೆಳೆಯಬೇಕು. ಸದೃಢ ಸಮಾಜ, ಮಾನವೀಯ ಗುಣಗಳು ಎಲ್ಲ
ರೂ ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಮುತ್ತ ಇರುವ ಭ್ರಷ್ಟಾಚಾರವೂ ಕ್ಯಾನ್ಸರ್ ರೋಗದಂತೆ ತಾಂಡವಾಡುತ್ತಿದೆ. ಇದನ್ನೂ ನಿರ್ಮೂಲನೆ ಮಾಡಲು ಎಲ್ಲರೂ ಒಟ್ಟಾಗಬೇಕು ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.
ಯೇಸು ಕ್ರಿಸ್ತರ್ ಬೋಧನೆಗಳನ್ನು ಸ್ವಾಮಿ ವಿವೇಕಾನಂದರಂತೆ ಮಹಾತ್ಮ ಗಾಂಧಿಜೀ ಅವರು ಕೂಡ ಇಷ್ಟಪಟ್ಟಿದ್ದರು. ಮಾತ್ರವಲ್ಲದೇ ಅವರ ಅಂಹಿಸಾ ಚಳವಳಿಯು ಯೇಸುಕ್ರಿಸ್ತರ್ ಉಪದೇಶಗಳಿಗೆ ಸರಿಸಮನಾಗಿಯೇ ಇತ್ತು. ಯೇಸುವು ತನ್ನನ್ನು ಶಿಲುಬೆಗೇರಿಸಿ ಕೊಂದವರನ್ನು ಕ್ಷಮಿಸಿದಂತೆ, ಗಾಂಧಿಜೀ ಅವರು ಕೂಡ ತಮ್ಮ ವೈರಿಗಳ ವಿರುದ್ಧ ಪ್ರತೀಕಾರವನ್ನು ಬಯಸಲಿಲ್ಲ. ಪ್ರೀತಿ ಹಾಗೂ ಕ್ಷಮೆಗಳು ಯೇಸುವಿನ ಬೋಧನೆಯಲ್ಲಿ ಪ್ರಾಬಲ್ಯ ವಹಿಸಿದರೆ ಅವುಗಳ ನಿಜವಾದ ಪರಿಪಾಲನೆಯನ್ನು ನಾವು ಗಾಂಧಿಜೀ ಅವರ ಜೀವನದಲ್ಲಿ ಕಾಣುತ್ತೇವೆ ಎಂದರು.
ಗಾಂಧಿಜೀ ಅವರು ತಮ್ಮ ಸಮಕಾಲಿನ ಸಮಾಜದ ಕುಂದು ಕೊರತೆಗಳನ್ನು ಸಪ್ತ ಪಾತಕಗಳ ಮೂಲಕ ಗುರುತಿಸಿಕೊಟ್ಟಿದ್ದಾರೆ. ತತ್ವರಹಿತ ರಾಜಕಾರಣ, ದುಡಿಮೆ ಇಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ಚಾರಿತ್ಯ್ರವಿಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ ಹಾಗೂ ತ್ಯಾಗವಿಲ್ಲದ ಧರ್ಮ, ಅಗಾಧ ಆಧ್ಯಾತ್ಮಿಕ ಶಕ್ತಿ ಮಾತ್ರ ಇಂತಹ ಪರಿಸ್ಥಿತಿಯಿಂದ ಹೊರಗೆ ಬರಲು ನೆರವಾಗಬಲ್ಲದು. ನೈಜ ದೈವಭಕ್ತಿ ಮಾತ್ರ ನಮ್ಮನ್ನು ಹಾಗೂ ಮುಂದಿನ ಪೀಳಿಗೆಯನ್ನು ಅತಿರೇಕಗಳಿಂದ ರಕ್ಷಣೆ ಮಾಡಲು ಸಾಧ್ಯ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.
ಬಲಾಢ್ಯರು ಹಾಗೂ ಧನಾಢ್ಯರಾಗುವುದೇ ನಮ್ಮ ಧ್ಯೇಯ ಎಂದು ಭಾಸವಾಗುತ್ತಿದೆ. ಎಲ್ಲವೂ ಧನಲಾಭದ ಸುತ್ತಮುತ್ತ ಕೇಂದ್ರೀಕೃತವಾಗಿದೆ. ಧರ್ಮವೂ ಕೇವಲ ಬಾಹ್ಯಾಚಾರಗಳಿಗೆ ಸೀಮಿತವಾಗಿ ನಮ್ಮ ಮನಸ್ಸು ಪರಿವರ್ತನೆ ಮಾಡುವಲ್ಲಿ ವಿಫಲವಾಗಿದೆ. ಅತಿರೇಕಗಳು ನಮ್ಮ ಸ್ವಭಾವಗಳನ್ನು ವಿಚಲಿತರನ್ನಾಗಿ ಮಾಡುತ್ತಿವೆ. ಛಾಯಾಚಿತ್ರ, ವಿಡಿಯೊಗಳನ್ನು ಫಾರ್ವರ್ಡ್ ಮಾಡುವುದರಲ್ಲಿ ಸೀಮಿತವಾಗಿದ್ದೇವೆ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಯೇಸು ಅವರು ಸಂದೇಶಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ತಿಳಿಸಿದರು.
ಪ್ರೀತಿ ಸ್ವರ್ಗ, ದ್ವೇಷ ನರಕ. ಪ್ರೀತಿಸುವ ಮತ್ತು ಸ್ವತ್ಯಾಗ ಕೊಡುವ ಕಲೆಯನ್ನು ನಮಗೆ ಕಲಿಸಲು ದೇವರು ಮಾನವನಾದನು. ಎಲ್ಲ ಸದ್ಗುಣಗಳಲ್ಲಿ ಪ್ರೀತಿ ಸರ್ವಶ್ರೇಷ್ಠವಾಗಿದೆ. ಯೇಸು ಈ ಕ್ರಿಸ್ಮಸ್ ಸಂದರ್ಭದಲ್ಲಿ ನಿಜವಾದ ಪ್ರೀತಿ ಹುಟ್ಟುಹಾಕಲಿ. ನಮ್ಮೆಲ್ಲರ ರಕ್ಷಕ ಯೇಸುವಿನ ಜನನವೂ ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವನದಲ್ಲಿ ಒಳ್ಳೆಯತನ ಹಾಗೂ ಪ್ರೀತಿ ತರಲಿ ಎಂದು ಹಾರೈಸಿದರು.
ಸಂಪರ್ಕ ಅಧಿಕಾರಿಗಳಾದ ಫಾದರ್ ಜೆ. ಬಿ. ಸಾಲ್ಡಾನ, ರಾಯ್ ಕ್ಯಾಸ್ತೋಲಿನೊ, ಧರ್ಮಪ್ರಾಂತ್ಯದ ಪರಿಷತ್ ಕಾರ್ಯದರ್ಶಿ, ಜಾನ್ ಡಿಸಿಲ್ವಾ, ಎಲಿಯಾಸ್ ಫರ್ನಾಂಡಿಸ್, ಧರ್ಮಪ್ರಾಂತ್ಯದ ಮಾಜಿ ಕಾರ್ಯದರ್ಶಿ ಸುಶೀಲ್ ನರೋನ್ಹಾ, ರಾಕ್ಣೊ ಸಂಪಾದಕ ಫಾದರ್ ರೂಪೇಶ್ ಮಾಡ್ತಾ ಇದ್ದರು.