ಕುಂದಾಪುರ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಮಂಗಳವಾರ ಸಂಸತ್ ಭವನದಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ಪ್ರಸಕ್ತ ಹಣಕಾಸು ವರ್ಷ (2022-23) ಕ್ಕೆ 2,472 ಕಿ.ಲೀ ಹಿಂದಿನ ಹಂಚಿಕೆಗೆ, ಹೆಚ್ಚುವರಿಯಾಗಿ 3,000 ಕಿ.ಲೀ ಸಬ್ಸಿಡಿ ರಹಿತ ಪಿಡಿಎಸ್ ಸೀಮೆಎಣ್ಣೆಯನ್ನು ಕರ್ನಾಟಕ ಸರ್ಕಾರಕ್ಕೆ ಮಂಜೂರು ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದರಲ್ಲದೆ, ಬಾಕಿ ಉಳಿದ ಸೀಮೆಎಣ್ಣೆಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ ಸರ್ಕಾರಕ್ಕೆ 12,195 ಕಿ.ಲೀ ನೈಜ ಹಂಚಿಕೆಯಲ್ಲಿ, ಪ್ರಸಕ್ತ ಹಣಕಾಸು ವರ್ಷಕ್ಕೆ 5,472 ಕಿ.ಮೀ ಮಾತ್ರ ಮಂಜೂರಾಗಿದೆ. ಆದ್ದರಿಂದ, ಕರ್ನಾಟಕದ ಬಡ ಮೀನುಗಾರರಿಗೆ ಸಹಾಯ ಮಾಡಲು ಬಾಕಿ ಉಳಿದ 6,723 ಕಿ.ಮೀ ಗಳನ್ನು ಕರ್ನಾಟಕ ಸರ್ಕಾರಕ್ಕೆ ಮಂಜೂರು ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕೆಂದು ವಿನಂತಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಶೀಘ್ರದಲ್ಲಿ ಕರ್ನಾಟಕದ ಬಾಕಿ ಉಳಿದ ಸೀಮೆಎಣ್ಣೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.