ಕುಂದಾಪು : ಬೆಂಗಳೂರಿನ ಶಾಂಗ್ರಿಲಾ ಹೋಟೇಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿದ ಜೈ ಭಾರ್ಗವ ಸಂಘಟನೆಯ ಸಂಚಾಲಕ ಅಜಿತ್ ಶೆಟ್ಟಿ ಕಿರಾಡಿ ಅವರ ನೇತೃತ್ವದ ನಿಯೋಗದ ಸದಸ್ಯರು ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆ ಜತೆಗೆ ವಿಲೀನ ಮಾಡುವ ಹಾಗೂ ಬಾರಕೂರು ನಿಲ್ದಾಣದಲ್ಲಿ ನಿಲುಗಡೆ ಸ್ಥಗಿತಗೊಂಡಿರುವ ಮತ್ಸ್ಯಗಂಧ ಎಕ್ಸ್ಪ್ರಸ್ ರೈಲಿನ ನಿಲುಗಡೆಗಾಗಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಜಿತ್ ಶೆಟ್ಟಿ ಕಿರಾಡಿ ಹಾಗೂ ನಿಯೋಗದ ಸದಸ್ಯರು ಕೊಂಕಣ ರೈಲ್ವೆ ನಿಗಮದಿಂದ ಪ್ರಸ್ತುತ ಈ ಭಾಗದ ಜನರಿಗೆ ಹಾಗೂ ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ವಿವರಿಸಿದರಲ್ಲದೆ, ಪ್ರಯಾಣಿಕರ ಅನುಕೂಲತೆಗಾಗಿ ನಿಗಮವನ್ನು ವಿಲೀನಗೊಲಿಸುವ ಅಗತ್ಯತೆಯನ್ನು ಮನವರಿಕೆ ಮಾಡಿದರು. ಈ ಹಿಂದೆ ಬಾರಕೂರು ರೈಲು ನಿಲ್ದಾಣದಲ್ಲಿ ಮತ್ಸ್ಯಗಂಧ ಎಕ್ಸ್ಪ್ರಸ್ ರೈಲಿನ ನಿಲುಗಡೆ ನೀಡುತ್ತಿದ್ದು, ಕೋವಿಡ್ ಹಾಗೂ ಇತರ ಕಾರಣದಿಂದ ತಾತ್ಕಾಲಿಕವಾಗಿ ರದ್ದಾಗಿದ್ದ ನಿಲುಗಡೆಯನ್ನು ಇದೀಗ ಮುಂದುವರೆಸುತ್ತಿದ್ದು ಇದರಿಂದ ಈ ಭಾಗದ ರೈಲು ಪ್ರಯಾಣಿಕರಿಗೆ ತೊಂದರೆಗಳಾಗುತ್ತಿದ್ದು, ಕೂಡಲೇ ಮತ್ಸ್ಯಗಂಧ ಎಕ್ಸ್ಪ್ರಸ್ ರೈಲಿನ ನಿಲುಗಡೆಗಾಗಿ ಕ್ರಮ ಕೈಗೊಳ್ಳಲು ಸೂಚಿಸುವಂತೆ ಮನವಿ ಮಾಡಿದರು. ನಿಯೋಗ ಸದಸ್ಯರ ಮನವಿಗೆ ಪ್ರತಿಸ್ಪಂದಿಸಿದ ಸಚಿವರು, ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು.
ಗಿಳಿಯಾರು ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರ್, ರಾಜ್ಯ ಬಿಜೆಪಿ ಪ್ರಕಾಶನ ಪ್ರಕೋಷ್ಠದ ಸಹ ಸಂಚಾಲಕ ಅಜಿತ್ ಶೆಟ್ಟಿ ಹೆರಂಜೆ ಇದ್ದರು.